Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/111

This page has been proofread.

ಕೈಗಾರಿಕಾ ವಿಭಾಗವು ಆರ್ಥಿಕ ಸ್ಥಿತಿ ಬಲಗೊಳ್ಳುವವರೆಗೆ ಸುಮಾರು 25ರಿಂದ 30 ಕೆಲಸಗಾರರಿಗೆ ವೇತನ ನೀಡುವ ವ್ಯವಸ್ಥೆಯನ್ನು ಸಂಘವೇ ಬರಿಸಿತು.,

ಬಾಸೆಲ್ ಮಿಶನ್‌ನವರಿಂದ ಮಂಗಳೂರಿನಲ್ಲಿ ಪ್ರಾರಂಭಿಸಲ್ಪಟ್ಟ ನೇಯಿಗೆ ಕಾರ್ಖಾನೆಯನ್ನು 1914ರ ಮಹಾಯುದ್ಧದ ನಂತರ ಕಾಮನ್‌ವೆಲ್ತ್ ಸಂಸ್ಥೆಯು ನಡೆಸುತ್ತಿತ್ತು. ಕಾಮನ್‌ವೆಲ್ತ್ ಈ ಕ್ಷೇತ್ರವನ್ನು ಕೈಗೆತ್ತಿಕೊಂಡಾಗ ಹಲವಾರು ಕೆಲಸಗಾರರು ಇಲ್ಲಿ ಕೆಲಸ ಕಳಕೊಂಡಿದ್ದರು ಇಲ್ಲವೇ ವೈಯಕ್ತಿಕ ಕಾರಣಗಳಿಂದ ಸೇವೆಯನ್ನು ಬಿಟ್ಟಿದ್ದರು. ಇವರಲ್ಲಿ ಹಲವರು ಬನಿಯನು ತಯಾರಿಸುವಲ್ಲಿ ಹಾಗೂ ಹೊಲಿಗೆಯಲ್ಲಿ ಪರಿಣಿತರಾಗಿದ್ದ ಸ್ತ್ರೀ ಪುರುಷರು ಇದ್ದುದರಿಂದ ಅವರನ್ನೇ ಇಲ್ಲಿ ಕೆಲಸಕ್ಕೆ ಬಳಸಿಕೊಂಡದ್ದರಿಂದ ನೌಕರರ ಸಮಸ್ಯೆ ಬರದೆ ಅನುಕೂಲವೂ ಆಯಿತು. ಆದರೆ ಉತ್ಸಾಹದಿಂದ ಆರಂಭವಾದ ಕೈಗಾರಿಕಾ ಶಾಖೆಯು ಆರಂಭದ ಮೂರು ವರ್ಷಗಳಲ್ಲಿ ಅತ್ಯಂತ ಚಿಂತೆಗೆ ಗುರಿ ಮಾಡಿತು. ಭಾರತದಲ್ಲಿ ನಡೆಯುತ್ತಿದ್ದ ಯುದ್ಧದ ಪರಿಣಾಮದಿಂದ ನೂಲಿನ ಕ್ರಯವು ಮಿತಿ ಮೀರಿದ್ದು ಮಾತ್ರವಲ್ಲದೆ ಖರೀದಿದಾರರು ಸೂಕ್ತ ಸಮಯಕ್ಕೆ ದೊರೆಯದೆ ಹೋದದ್ದು ಹಾಗೂ ಯಂತ್ರಗಳಿಗೆ ಅವಶ್ಯವಾದ ಸೂಜಿ ಮೊದಲಾದ ಉಪಕರಣಗಳು ಸಿಗದೆ ಇದ್ದು ಹಲವು ಸಂಕಷ್ಟಗಳಿಗೆ ಒಳಗಾಗಬೇಕಾಯಿತು. ಆರಂಭದ ಮೂರು ವರ್ಷಗಳಲ್ಲಿ ನಷ್ಟವೂ ಉಂಟಾಯಿತು. ಆದರೆ ಕೈಗಾರಿಕಾ ಕ್ಷೇತ್ರದಲ್ಲಿ ನುರಿತ ಅನುಭವವನ್ನು ಪಡೆದಿರುವುದರಿಂದ ಸ್ವಲ್ಪ ಮಟ್ಟಿನ ಪರಿಹಾರ ಕಂಡುಕೊಂಡು ಉತ್ಪಾದನೆಯನ್ನು ಮುಂದುವರಿಸುತ್ತಿತ್ತು. ಸಮಯದಲ್ಲಿ ಈ ಶಾಖೆಯಲ್ಲಿ 23 ಮಂದಿ ಸ್ತ್ರೀ ಪುರುಷ ನೌಕರರಿದ್ದರು. ಬಟ್ಟೆಗಳಿಗೆ ಬಣ್ಣಹಾಕಲು ಬೇಕಾದ ಸಿಮೆಂಟಿನಿಂದ ನಿರ್ಮಿಸಿದ ಟ್ಯಾಂಕ್‌ಗಳು ಇದ್ದವು. 1942ರಿಂದ ಸಂಘವು ಸ್ವಂತ ಸ್ಥಳಕ್ಕೆ ಸ್ಥಳಾಂತರವಾದಾಗ ಕೈಗಾರಿಕಾ ಶಾಖೆಯೂ ಇಲ್ಲಿಯೇ ಕಾರ್ಯವೆಸಗತೊಡಗಿತು. ಸಂಸ್ಥೆಯನ್ನು ಮದ್ರಾಸಿನ ಹ್ಯಾಂಡ್‌ಲೂಮ್ ವೀವರ್ ಪ್ರೊವಿನ್ಶಿಯಲ್ ಕೋ- ಒಪರೇಟಿವ್ ಸೊಸೈಟಿಗೆ ಸಂಯೋಜಿಸಿದ್ದು ಮದ್ರಾಸ್‌ನಿಂದ ನೂಲು, ಬಟ್ಟೆ ಇತರ ಸಾಮಾಗ್ರಿಗಳನ್ನು ರಿಯಾಯತಿ ದರದಲ್ಲಿ ಪಡೆದುಕೊಳ್ಳುತ್ತಿತ್ತು. 1947ರಲ್ಲಿ ಸಂಘದ ಚಟುವಟಿಕೆ ಹಾಗೂ ಕೈಗಾರಿಕಾ ಘಟಕದ ಕಾರ್ಯಚಟುವಟಿಕೆಗಳ ನಿಮಿತ್ತವಾಗಿ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲು ಬಲ್ಮಠದಲ್ಲಿದ್ದ ಮಿಶನ್ ಶಾಲೆಯ ಪಕ್ಕದಲ್ಲಿದ್ದ ಕೋಣೆಯೊಂದನ್ನು ಬಾಡಿಗೆಗೆ ಪಡೆದುಕೊಂಡು ಮುಂದುವರಿಸುತ್ತಿದ್ದರೂ ಈ ಸಂಸ್ಥೆ 1954ರಲ್ಲಿ ಸ್ಥಗಿತಗೊಂಡಿತು.
ಸ್ಮಾನಿ ಹೊಸೈರಿ: ಕಂಕನಾಡಿಯಲ್ಲಿ ವಾಸವಾಗಿದ್ದ ಶ್ರೀಯುತ ಸ್ವಾನಿ ಜಾಕೋಬ್

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...