Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/221

This page has been proofread.

ನಿಲ್ಲಿಸಿಟ್ಟರೆ ಬೈಂಡು ಸಡಿಲವಾಗಿ, ಹೊಲಿಗೆ ಬಿಟ್ಟು ರಟ್ಟು ಕಿತ್ತುಬಂದು ಗ್ರಂಥವು ಹಾಳಾಗಬಹುದು. ಆದ್ದರಿಂದ ಪುಸ್ತಕಗಳನ್ನು ಒತ್ತೊತ್ತಿ ಇಡಬೇಕು (ಬುಕ್ ಸಪೋರ್ಟ್ ಸಹಾಯ ಪಡೆಯಬಹುದು)
ಗ್ರಂಥಪ್ರಿಯರಿಗೆ ಗ್ರಂಥಸಂರಕ್ಷಣೆ ಮಾಡುವುದು ದೊಡ್ಡ ಸಮಸ್ಯೆ. ಕೆಲವು ವೇಳೆ ಗ್ರಂಥಗಳನ್ನು ಶೇಖರಿಸುವುದು ಸುಲಭ ಸಾಧ್ಯವಾಗಬಹುದು. ಆದರೆ ಶೇಖರಿಸಿದ ರಾಶಿಯನ್ನು ಮುಂದಿನ ಪೀಳಿಗೆಗಳ ಉಪಯೋಗಕ್ಕಾಗಿ ಕಾದಿರಿಸುವುದು ಅತ್ಯಂತ ಕಷ್ಟದ ಕೆಲಸ. ಜಗತ್ತಿನಲ್ಲಿರುವ ಪ್ರತಿಯೊಂದು ವಸ್ತುವಿಗೂ ಒಂದೊಂದು ನಿಯಮಿತ ವೇಳಾ ಪರಿಮಿತಿ ಇರುವಂತೆ ಕಾಗದಗಳಿಗೂ ಒಂದು ಕಾಲದ ಪರಿಮಿತಿ ಇದೆ. ಈ ಪರಿಮಿತಿ ಮೀರಿದ ನಂತರ ಕಾಗದವು ತನ್ನ ಆಯುಷ್ಯವನ್ನು ಕಳೆದುಕೊಳ್ಳುತ್ತದೆ. ಅಂತಹ ಹಾಳೆಗಳನ್ನು ಎಷ್ಟು ಜಾಗ್ರತೆಯಿಂದ ಉಪಯೋಗಿಸಿದರೂ ಕಾಗದ ಪುಡಿಪುಡಿಯಾಗುತ್ತದೆ. ಈಚೆಗೆ ವೈಜ್ಞಾನಿಕ ಸಂಶೋಧನೆಗಳೂ ಹೆಚ್ಚು ಮುಂದುವರಿದಿರುವುದರಿ೦ದ ಕಾಗದ ತಯಾರಿಸುವಾಗಲೇ ಮುಂಜಾಗ್ರತೆ ವಹಿಸಿ ಇದರ ಆಯುಷ್ಯವನ್ನು ಹೆಚ್ಚಿಸುವ ಪ್ರಯತ್ನ ನಡೆದಿದೆ. ಗ್ರಂಥಗಳ ದೊಡ್ಡ ಹಾಗೂ ಭಯಾನಕ ಶತ್ರು ಎಂದರೆ ಕ್ರಿಮಿ ಕೀಟಗಳು. ಈ ಕ್ರಿಮಿ ಕೀಟಗಳ ಹಾವಳಿಯಿಂದ ಗ್ರಂಥಗಳನ್ನು ರಕ್ಷಿಸುವುದು ಅಷ್ಟು ಸುಲಭವಲ್ಲ. ಹಲವಾರು ದಿನ ಒಂದೇ ಕಡೆ ಗ್ರಂಥಗಳನ್ನು ನಿರುಪಯುಕ್ತವಾಗಿ ಇಟ್ಟುಬಿಟ್ಟರೆ ಅಲ್ಲಿ ಕೀಟಗಳು ದಾಳಿಮಾಡಿ ಗ್ರಂಥಗಳನ್ನು ನಾಶಮಾಡುತ್ತದೆ. ಈ ಕೀಟಗಳಲ್ಲಿ ಹಲವಾರು ವಿಧಗಳಿವೆ. ಗಂಡ ಕೊರೆಯುವ ಹುಳುಗಳು, ಜಿರಳೆ, ಗೆದ್ದಲು, ಸಿಲ್ವರ್ ಫಿಶ್, ಇವುಗಳಲ್ಲಿ ಗ್ರಂಥಕೀಟ, ಗೆದ್ದಲು ಮತ್ತು ಜಿರಳೆಗಳು ಗ್ರಂಥಗಳ ಅತ್ಯಂತ ವಿನಾಶಕಾರಿ ಶತ್ರುಗಳಾಗಿವೆ. ಪ್ರಾಚೀನ ಗ್ರಂಥಗಳ ಅನೇಕ ಹಸ್ತಪ್ರತಿಗಳ ಹೆಸರುಗಳನ್ನು ಇಂದು ನಾವು ಕೇಳುತ್ತೇವಾದರೂ ನೋಡಲಾಗುತ್ತಿಲ್ಲ. ಎಂದರೆ ಈ ಬಗ್ಗೆ ಹಿಂದಿನವರು ಎಚ್ಚರ ವಹಿಸುತ್ತಿರಲಿಲ್ಲವೆಂದಲ್ಲ. ಆದರೂ ಅನೇಕ ರೀತಿಯ ಶಾಸ್ತ್ರೀಯ ಗ್ರಂಥಗಳು ಹಾಗೂ ಹಸ್ತಪ್ರತಿಗಳು ಕಾಲನ ತುಳಿತಕ್ಕೆ ಬಲಿಯಾಗಿ ಅವುಗಳು ನಮಗೆ ಲಭ್ಯವಾಗದೇ ಹೋಗಿವೆ. ಗೆದ್ದಲು ಹುಳುವಿನಲ್ಲಿ 2 ವಿಧ. ನೆಲಗೆದ್ದಲು, ಮತ್ತೊಂದು ಮರದಿಂದ ಬರುವ ಗೆದ್ದಲು. ಇದಕ್ಕಾಗಿಯೇ ಗೆದ್ದಲು ಹಿಡಿಯುವಂತ ಮರದ ಕಬಾಟುಗಳಲ್ಲಿ ಪುಸ್ತಕಗಳನ್ನಿಡಬಾರದು. ಅಲ್ಲದೆ ಮಣ್ಣಿನ ಗೆದ್ದಲಿನಿಂದ ದೂರವಿರಬೇಕಾದರೆ ಮಣ್ಣಿನ ಗೋಡೆಗೆ ತಾಗಿಸಿ ಪುಸ್ತಕದ

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...209